Apr 042012
 

ಅಮೆರಿಕದ ಹಿರಿಯ ಕನ್ನಡಿಗರಲ್ಲಿ ಒಬ್ಬರಾದ ಡಾ|| ಎಚ್. ಕೆ. ಚಂದ್ರಶೇಖರ್ ಅವರೆ,

ತಮ್ಮ ಸಹಸ್ರಚಂದ್ರ ದರ್ಶನದ ಶುಭಸಂದರ್ಭದಲ್ಲಿ, ಕನ್ನಡ ಸಾಹಿತ್ಯ ರಂಗದ ಪರವಾಗಿ ನಮ್ಮ ಹಾರ್ದಿಕ ಶುಭಾಶಯಗಳನ್ನು ಕೋರಲು ನನಗೆ ಅತ್ಯಂತ ಆನಂದವೂ ಹೆಮ್ಮೆಯೂ ಆಗುತ್ತಿದೆ. ಸಾಹಿತ್ಯ ರಂಗ ಹುಟ್ಟಿದಾಗಿನಿಂದ ತಾವು ಅದರ ನಾಯಕತ್ವದ ಸಕ್ರಿಯ ಭಾಗವಾಗಿದ್ದೀರಿ. ರಂಗದ ಕಾರ್ಯಕಾರೀ ಸಮಿತಿಯ ಉಪಾಧ್ಯಕ್ಷರಾಗಿ, ಆಡಳಿತ ಮಂಡಲಿಯ ಅಧ್ಯಕ್ಷರಾಗಿ ಮತ್ತು ಸಂಪಾದಕ ಮಂಡಲಿಯ ಸದಸ್ಯರಾಗಿ ನಮಗೆಲ್ಲಾ ತಮ್ಮ ಮುಂದಾಳತ್ವವನ್ನು ನೀಡಿದ್ದೀರಿ. ಸಾಹಿತ್ಯ ರಂಗ ಈವರೆಗೆ ನಡೆಸಿರುವ ಪ್ರತಿಯೊಂದು ಸಮ್ಮೇಳನದಲ್ಲೂ ಸಕ್ರಿಯವಾಗಿ ಭಾಗವಹಿಸಿ ನಮಗೆ ಮಾರ್ಗದರ್ಶನ ನೀಡಿದ್ದೀರಿ. ರಂಗದ ಕಾರ್ಯಚಟುವಟಿಕೆಗಳಿಗೆ ಬೇಕಾದ ಹಣವನ್ನು ಶೇಖರಿಸುವಲ್ಲಿ ತಾವು ಮಾಡಿರುವ ಸಹಾಯ ಅತ್ಯಮೂಲ್ಯವಾದುದು, ಜೊತೆಗೆ ತಾವೂ ತಮ್ಮ ಶ್ರೀಮತಿಯವರೂ ಸೇರಿ ಮಾಡಿರುವ ವೈಯಕ್ತಿಕ ಧನಸಹಾಯವನ್ನು ನಾವು ಮನಸಾರೆ ಕೃತಜ್ಞತೆಯಿಂದ ಈ ಸಂದರ್ಭದಲ್ಲಿ ನೆನೆಯುತ್ತೇವೆ.

ಕನ್ನಡ ಸಾಹಿತ್ಯ ರಂಗವೇ ಅಲ್ಲದೇ ನ್ಯೂಯಾರ್ಕ್ ಕನ್ನಡ ಕೂಟದ ಮೂಲಕ ತಾವು ಮಾಡಿರುವ ನಾಲ್ಕು ದಶಕಗಳಿಗೂ ಮೀರಿದ ಕನ್ನಡ ಸೇವೆ ಅಮೆರಿಕದ ಕನ್ನಡಿಗರ ಚರಿತ್ರೆಯಲ್ಲಿ ಪ್ರಮುಖವಾದ ಸ್ಥಾನವನ್ನು ಗಳಿಸಿದೆ. ಅಮೆರಿಕದಲ್ಲಿ ಮೊದಲ ಬಾರಿಗೆ ಕನ್ನಡ ಸಮ್ಮೇಳನಗಳನ್ನು ಆಚರಿಸುವ ಯೋಜನೆಯನ್ನು ಪರಿಕಲ್ಪಿಸಿದವರು ನೀವು. ಆಚಾರ್ಯ ಎ.ಎನ್. ಮೂರ್ತಿರಾಯರ ‘ಪೂರ್ವಸೂರಿಗಳೊಡನೆ’ ಪುಸ್ತಕವನ್ನು ನ್ಯೂ ಯಾರ್ಕ್ ಕನ್ನಡ ಕೂಟದ ಮೂಲಕ ಪ್ರಕಟಿಸಿ ಇಲ್ಲಿನ ಕನ್ನಡ ಸ೦ಸ್ಥೆಗಳು ಸಾಹಿತ್ಯ ಕ್ಷೇತ್ರದಲ್ಲಿ ಎಷ್ಟು ಮೌಲಿಕವಾದ ಕೆಲಸ ಮಾಡಬಹುದೆ೦ದು ತೋರಿಸಿಕೊಟ್ಟಿರಿ. ಸ್ವತಃ ಅನೇಕ ಲೇಖನಗಳನ್ನು ಬರೆದಿರುವುದಲ್ಲದೆ, ನೀವು ಭಾಷಾ೦ತರಿಸಿದ ‘ಭಾರತದ ಬೃಹತ್ ಬೇಲಿ’ ಪುಸ್ತಕದ ಮೂಲಕ ಬ್ರಿಟಿಷ್ ವಸಾಹತುಶಾಹಿ ಚರಿತ್ರೆಯ ಮರೆತುಹೋದ ಒ೦ದು ಪರಿಚ್ಛೇದವನ್ನು ಮತ್ತೆ ನಮ್ಮ ಕಣ್ಣೆದುರಿಗೆ ಇರಿಸಿದಿರಿ. ಗಾ೦ಧಿಯನ್ನು ನ್ಯೂ ಯಾರ್ಕ್ ಜನರ ಕಣ್ಣ ಮು೦ದೆ ತ೦ದಿಟ್ಟಿರಿ. ಕನ್ನಡಿಗರು ಮಾತ್ರವಲ್ಲದೆ, ಇಡೀ ಭಾರತೀಯ ಸಮಾಜವನ್ನೂ ದಾಟಿ ಒಟ್ಟಿನಲ್ಲಿ ಇಲ್ಲಿನ ಅಮೆರಿಕನ್ ಸಮಾಜಕ್ಕೂ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸಿದ್ದೀರಿ. ವೈದ್ಯಕೀಯ ಕ್ಷೇತ್ರದಲ್ಲಿ ಅಮೂಲ್ಯ ಕೊಡುಗೆಯನ್ನು ಮಾಡುವುದರ ಮೂಲಕ ತಾವು ಸಲ್ಲಿಸಿರುವ ಸೇವೆಯ ಜೊತೆ ಜೊತೆಗೇ ಕನ್ನಡ ಮತ್ತು ಕನ್ನಡಿಗರ ಬಗ್ಗೆ ತಾವು ತೋರಿರುವ ಕಾಳಜಿ ಗಮನಾರ್ಹವಾದುದು. ತಮ್ಮ ಕನ್ನಡಸೇವೆ ಇದೇ ರೀತಿ ಮುಂದುವರೆಯಲಿ. ಕನ್ನಡ ಸಾಹಿತ್ಯ ರಂಗದ ಚಟುವಟಿಕೆಗಳ ಬಗ್ಗೆ ಹಿಂದೆ ತೋರಿರುವ ವಿಶ್ವಾಸ ಮತ್ತು ಕಾಳಜಿಯನ್ನು ಮುಂದೆಯೂ ತೋರಬೇಕೆಂದು ರಂಗದ ಪರವಾಗಿ ಕೇಳಿಕೊಳ್ಳುತ್ತೇನೆ. ತಾವು ಎಂಬತ್ತು ದಾಟಿರುವ ಈ ಸಂದರ್ಭದಲ್ಲಿ ಭಗವಂತನು ನಿಮಗೂ ನಿಮ್ಮ ಕುಟುಂಬದವರಿಗೂ ಆಯುರಾರೋಗ್ಯಗಳನ್ನು ದಯಪಾಲಿಸಲೆಂದು ಬೇಡುತ್ತಾ ಈ ನನ್ನ ಪತ್ರವನ್ನು ಮುಗಿಸುತ್ತೇನೆ.

ಇಂತು,
ತಮ್ಮವನೇ ಆದ

ಮೈ.ಶ್ರೀ. ನಟರಾಜ

 Posted by at 6:42 PM
Mar 222012
 

ವಿಶ್ವನಾಥ್ ಹುಲಿಕಲ್

ಕನ್ನಡ ಸಾಹಿತ್ಯ ರಂಗದ ಐದನೆಯ ವಸಂತ ಸಾಹಿತ್ಯೋತ್ಸವವು ವುಡ್‌ಸೈಡ್ ಪ್ರೌಢಶಾಲೆಯ ಸಭಾಂಗಣದಲ್ಲಿ ಏಪ್ರಿಲ್ ೩೦ ಮತ್ತು ಮೇ ೧, ೨೦೧೧ರಂದು ಆಯೋಜನಗೊಂಡಿತ್ತು. ಈ ಸಾಹಿತ್ಯೋತ್ಸವ ಉತ್ತರ ಕ್ಯಾಲಿಫ಼ೋರ್ನಿಯ ಕನ್ನಡ ಕೂಟದ ಸಹಯೋಗ ಮತ್ತು ಸ್ಥಳೀಯ ‘ಸಾಹಿತ್ಯ ಗೋಷ್ಠಿ’ಯ ಸಹಕಾರದೊಂದಿಗೆ ಅತ್ಯಂತ ಸಂಭ್ರಮ ಮತ್ತು ಉಲ್ಲಾಸಗಳಿಂದ ನಡೆಯಿತು.

ಏಪ್ರಿಲ್ ೩೦ರ ಮಧ್ಯಾಹ್ನ ೧:೫೦ಕ್ಕೆ ‘ಕನ್ನಡ ಜನ ಮತ್ತು ಕನ್ನಡ ಮನ’ ಎಂಬ ಸ್ವಾಗತ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಎಚ್.ಕೆ.ಚಂದ್ರಶೇಖರ್ ಮತ್ತು ಕಿರಣ್ ಮೈಯ ನೆರೆದಿದ್ದ ಸಾಹಿತ್ಯಾಸಕ್ತರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ ನಂತರ, ಸಾಹಿತ್ಯೋತ್ಸವದ ಆರಂಭ ಘೋಷಣೆಯನ್ನು ಕನ್ನಡ ಸಾಹಿತ್ಯ ರಂಗದ ಅಧ್ಯಕ್ಷ ಎಚ್.ವೈ.ರಾಜಗೋಪಾಲ್ ಮತ್ತು ಕನ್ನಡ ಕೂಟದ ಅಧ್ಯಕ್ಷೆ ಪದ್ಮ ರಾವ್ ಅವರು ಮಾಡಿದರು. ಸಮ್ಮೇಳನದ ಮಖ್ಯ ಅತಿಥಿಗಳಾಗಿ ಕರ್ನಾಟಕದಿಂದ ಆಗಮಿಸಿದ್ದ ಪ್ರಮುಖ ಸಾಹಿತಿಗಳಾದ ಡಾ. ಸುಮತೀಂದ್ರ ನಾಡಿಗ ಮತ್ತು ಭುವನೇಶ್ವರಿ ಹೆಗಡೆ ಅವರುಗಳನ್ನು ಅನುಕ್ರಮವಾಗಿ ರಾಜಗೋಪಾಲ್ ಮತ್ತು ಗುರುಪ್ರಸಾದ್ ಕಾಗಿನೆಲೆ ಆತ್ಮೀಯವಾಗಿ ಸಭೆಗೆ ಪರಿಚಯಿಸಿದರು. ತದನಂತರ, ಸಾಹಿತ್ಯ ರಂಗದ ಐದನೆಯ ಪ್ರಕಟಣೆಯಾದ ‘ಮಥಿಸಿದಷ್ಟೂ ಮಾತು’ (ಸಂ: ತ್ರಿವೇಣಿ ಶ್ರೀನಿವಾಸರಾವ್ ಮತ್ತು ಎಂ.ಆರ್.ದತ್ತಾತ್ರಿ) ಎಂಬ ಲಲಿತ ಪ್ರಬಂಧ ಸಂಕಲನವನ್ನು ನಾಡಿಗರು ಲೋಕಾರ್ಪಣೆ ಮಾಡಿದರು; ಈ ಕೃತಿಯಲ್ಲಿ ಅಮೇರಿಕದ ಕನ್ನಡಿಗರ ಸಲ್ಲಾಪ, ಹರಟೆ ಮತ್ತು ಚಿಂತನೆಗಳ ೨೭ ಲಲಿತ ಪ್ರಬಂಧಗಳಿವೆ. ನಂತರ ‘ಕನ್ನಡ ಸಾಹಿತ್ಯದಲ್ಲಿ ಪ್ರಬಂಧ ಪ್ರಕಾರ’ ಎಂಬ ವಿಷಯದ ಬಗ್ಗೆ ನಾಡಿಗರು ತಮ್ಮ ವಿದ್ವತ್ಪೂರ್ಣ ಭಾಷಣವನ್ನು ಮಾಡಿದರು. ವಿಶ್ವ ಸಾಹಿತ್ಯದಲ್ಲಿ ಪ್ರಬಂಧ ಪ್ರಕಾರದ ಉಗಮ ಮತ್ತು ಅದರ ಬೆಳವಣಿಗೆಯ ಹೆಜ್ಜೆ ಗುರುತುಗಳನ್ನು ಪಟ್ಟಿಮಾಡುತ್ತಾ ಮಾಂತೇನ್, ಬೇಕನ್, ಲ್ಯಾಂಬ್, ಅಡಿಸನ್, ಎಮರ್ಸನ್, ಥೋರೊ ಅವರುಗಳ ಕೊಡುಗೆಯನ್ನು ಸ್ಮರಿಸಿದರು. ಹಾಗೆಯೇ, ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಲಲಿತ ಪ್ರಬಂಧ ಪ್ರಕಾರದ ಹುಟ್ಟು ಮತ್ತು ಅಭಿವೃದ್ಧಿ ಪಥವನ್ನು ಚಿತ್ರಿಸಿದರು. ಕುವೆಂಪುರವರ ‘ರಾಮರಾವಣರ ಯುದ್ಧ’, ಎ.ಎನ್.ಮೂರ್ತಿರಾಯರ ‘ಅಕ್ಕಿ ಹೆಬ್ಬಾಳು’ ಮತ್ತು ಪು.ತಿ.ನ. ಅವರ ‘ಧೇನುಕೋಪಾಖ್ಯಾನ’ ಎಂಬ ಲಲಿತ ಪ್ರಬಂಧಗಳನ್ನು ಸೋದಾಹರಣವಾಗಿ ವಿವರಿಸಿದರು. ಲಲಿತ ಪ್ರಬಂಧ ಎಂಬುದು ಒಂದು ಕ್ಷಣದಲ್ಲಿ ಹೊಳೆದ ಅಥವಾ ಸ್ಫೂರ್ತಿಕೊಟ್ಟ ಒಂದು ವಿಷಯದ ಸುತ್ತ ಮನಸ್ಸನ್ನು ಹರಿಯಬಿಟ್ಟು ರಚಿಸಿದ ಗದ್ಯಪ್ರಕಾರವೆನ್ನಬಹುದು. ಒಟ್ಟಿನಲ್ಲಿ, ನಾಡಿಗರು, ಲಲಿತಪ್ರಬಂಧಗಳ ಲಕ್ಷಣ, ಗುಣವಿಶೇಷ ಮತ್ತು ವೈಶಿಷ್ಠ್ಯಗಳನ್ನು ಸಂಗ್ರಾಹ್ಯವಾಗಿ ಪರಿಚಯಿಸಿದರು.

ಚಹಾ ವಿರಾಮದ ನಂತರ ಮುಂದುವರೆದ ಸಮ್ಮೇಳನದ ಕಾರ್ಯಕ್ರಮ ‘ನಮ್ಮ ಹೆಮ್ಮೆಯ ಬರಹಗಾರರು’; ಅಮೇರಿಕದಲ್ಲಿ ಸಕ್ರಿಯವಾಗಿ ಸಾಹಿತ್ಯಕೃಷಿ ಮಾಡುತ್ತಿರುವ ಲೇಖಕರ ಕೃತಿಗಳನ್ನು ನಾಡಿಗರು ಬಿಡುಗಡೆ ಮಾಡಿದರು (ನಿರ್ವಹಣೆ: ಮಧುಕಾಂತ್ ಕೃಷ್ಣಮೂರ್ತಿ): ‘The Void and the Womb’ (ಎಂ.ಎಸ್.ನಟರಾಜ), ‘ಸಾಗರದಾಚೆಯ ಸ್ಪಂದನ’ (ಮಂಗಳಾ ಕುಮಾರ್), ‘ಗೃಹಪ್ರವೇಶ’ (ವಿಶ್ವನಾಥ್ ಹುಲಿಕಲ್), ‘ತಿಳಿ ನೀಲಿ ಪೆನ್ನು’ (ತ್ರಿವೇಣಿ ಶ್ರೀನಿವಾಸರಾವ್), ‘ಬೊಗಸೆಯಲ್ಲಿ ಬೆಳದಿಂಗಳು’ (ಶಾಂತಲಾ ಭಂಡಿ), ‘ಜೀವನ ರಹಸ್ಯ’ (ನಾಗ ಐತಾಳ್) ಮತ್ತು ‘ಸ್ನೇಹದಲ್ಲಿ ನಿಮ್ಮ ಹರಿ’. ನಂತರದ ಕಾರ್ಯಕ್ರಮ ‘ಸಾಹಿತ್ಯ ಸಂಕಿರಣ’; ಇದನ್ನು ಆಯೋಜಿಸಿ, ಪ್ರಸ್ತುತ ಪಡಿಸಿದವರು ‘ಸಾಹಿತ್ಯ ಗೋಷ್ಠಿ’ಯ ಅಧ್ಯಕ್ಷ ವಿಶ್ವನಾಥ್ ಹುಲಿಕಲ್. ಅಮೇರಿಕಾದ ಉದಯೋನ್ಮುಖ ಮತ್ತು ನೆಲೆಯೂರಿದ ಕನ್ನಡ ಲೇಖಕರಿಗೆ ಉತ್ತೇಜನ ಕೊಡುವ ದೃಷ್ಟಿಯಿಂದ, ಅವರುಗಳ ಸ್ವರಚಿತ ಕೃತಿಗಳ ವಾಚನಕ್ಕೆ ಅವಕಾಶ ಮಾಡಿಕೊಡುವ ವೇದಿಕೆ ಇದಾಗಿತ್ತು. ಇದರಲ್ಲಿ ವಾಚನವಾದ ಲೇಖನ/ಕವನಗಳೆಂದರೆ, ‘ಕಾಲ’ (ಪ್ರಕಾಶ ನಾಯಕ್), ‘ಆಗಸ ಸೋರಿ ಅಕ್ಷರವಾಗೆ’ (ಶಾಂತಲಾ ಭಂಡಿ), ‘ವರಾನ್ವೇಷಣೆ – ಸಂಭಾಷಣೆ’ (ಮೀನಾ ಸುಬ್ಬರಾವ್), ‘ಕಾಲದ ಘಂಟೆ’ (ತ್ರಿವೇಣಿ ಶ್ರೀನಿವಾಸರಾವ್), ‘ಸುಕುಮಾರ ರಾಯ್’ (ಹಂ.ಕ.ಕೃಷ್ಣಪ್ರಿಯ), ‘ವಚನಗಳು ಮತ್ತು ಎಕಾರ್ಟ್ ಅವರ ಪುಸ್ತಕ ದಿ ಪವರ್ ಆಫ಼್ ನೌ’ (ಶಶಿಕಲಾ ನಿಂಬಾಳ), ‘ಕನ್ನಡ ಕವಿಗಳ ಸಂಪರ್ಕ – ಸಾಹಿತ್ಯ ಯಾತ್ರೆ’ (ಜಿ.ಎಸ್.ಸತ್ಯ), ‘ಕನ್ನಡವೆಂದರೆ . . .’ (ಪಿ.ಆರ್.ಮೀರಾ), ‘ಬಿತ್ತು, ಬಿತ್ತದಿರು’ (ರವಿ ಗೋಪಾಲರಾವ್) ಮತ್ತು ‘ಹೂ ಬಾಣ ಹಿಡಿದವನಿಗೆ’ (ಕೆ.ವಿ.ರಾಮಪ್ರಸಾದ್).

ಆ ದಿನ ಸಾಯಂಕಾಲ ಮನರಂಜನಾ ಕಾರ್ಯಕ್ರಮ ಆಯೋಜನಗೊಂಡಿತ್ತು (ನಿರ್ವಹಣೆ: ಸಂಧ್ಯಾ ರವೀಂದ್ರನಾಥ್): ಮೊದಲಿಗೆ ಕನ್ನಡ ಕೂಟ ಅರ್ಪಿಸಿದ ಯಕ್ಷಗಾನ ‘ಕಂಸವಧೆ’(ಪಾತ್ರಧಾರಿ: ಅಶೋಕ ಉಪಾಧ್ಯ). ಅತ್ಯುತ್ತಮ ಪೋಷಾಕು, ನರ್ತನ ಮತ್ತು ಕುಶಲ ಸಂಭಾಷಣೆಗಳಿಂದ ಅದು ಪ್ರೇಕ್ಷಕರ ಮನಸೆಳೆಯಿತು. ಆ ದಿನ ರಾತ್ರಿ, ವಿದ್ಯಾ ಗುರಿಕಾರರ ಅಡುಗೆಯ ರಸದೌತಣ ಹಸಿದಿದ್ದ ದೇಹಗಳಿಗೆ ಸುಗ್ರಾಸ ಭೋಜನದಿಂದ ತೃಪ್ತಿನೀಡಿತು. ನಂತರದ ಅದ್ಭುತ ಕಾರ್ಯಕ್ರಮ ಪು.ತಿ.ನ. ಅವರ ಗೀತನಾಟಕ ‘ಹರಿಣಾಭಿಸರಣ’. ತನ್ನ ಶಕ್ತಿಯುತ ಸಾಹಿತ್ಯ, ರಂಗಸಜ್ಜಿಕೆ, ಅಭಿನಯ, ನೃತ್ಯ ಹಾಗೂ ಸಂಗೀತದ ಅನೂಹ್ಯ ಸಂಯೋಗ ಮತ್ತು ಕರಾರುವಾಕ್ಕಾದ ನಿರ್ದೇಶನದಿಂದ ಪ್ರೇಕ್ಷಕರನ್ನು ರಾಮಾಯಣದ ಅದ್ಭುತ ಲೋಕಕ್ಕೆ ಕರೆದೊಯ್ಯಿತು (ನಿರ್ಮಾಣ: ಅಲಮೇಲು ಅಯ್ಯಂಗಾರ್, ನೃತ್ಯ ನಿರ್ದೇಶನ: ಡಾ. ತುಳಸಿ ರಾಮಚಂದ್ರ, ಸಂಗೀತ ನಿರ್ದೇಶನ: ಶುಭಪ್ರಿಯ ಶ್ರೀವತ್ಸನ್ ಮತ್ತು ನಿರ್ವಹಣೆ: ತಿರುನಾರಾಯಣ ಅಯ್ಯಂಂಗಾರ್). ನಂತರದ ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದವರು ವಿದ್ಯಲತ ಜೀರಗೆ ಮತ್ತು ಕನ್ನಡ ಕೂಟದ ಯುವ ಸದಸ್ಯರು. ಮುಂದಿನ ಕಾರ್ಯಕ್ರಮ ಭುವನೇಶ್ವರಿ ಹೆಗಡೆ ಅವರಿಂದ ‘ಹಾಸ್ಯದ ಹೊನಲು’. ತಮ್ಮ ಅತಿಶಯವಾದ ಹಾಸ್ಯ ಪ್ರಜ್ಞೆಯಿಂದ ಮತ್ತು ಅಸ್ಖಲಿತ ವಾಣಿಯಿಂದ ನೆರೆದಿದ್ದ ಸಭಿಕರೆಲ್ಲರನ್ನೂ ಹಾಸ್ಯದ ಕಡಲಲ್ಲಿ ಮುಳುಗಿಸಿ ತೇಲಿಸಿದರು. ವಂದನಾರ್ಪಣೆಯನ್ನು ಪದ್ಮ ರಾವ್ ಅವರು ನೆರವೇರಿಸಿದರು. ನಾಡಗೀತೆಯೊಂದಿಗೆ, ಆ ದಿನದ ಕಾರ್ಯಕ್ರಮ ಮುಕ್ತಾಯಗೊಂಡಿತು.

ಮಾರನೇ ದಿನ ಮೇ ೧ರ ಬೆಳಿಗ್ಗೆ ಸಂಧ್ಯಾ ಗಾಯತ್ರಿ ಮತ್ತು ತಂಡದವರಿಂದ ‘ಎಲ್ಲಿದ್ದರು ಎಂತಿದ್ದರು ಕನ್ನಡಿಗರು ನಾವು’ ಎಂಬ ಆರಂಭಗೀತೆಯೊಂದಿಗೆ ಕಾರ್ಯಕ್ರಮ ಶುರುವಾಯಿತು. ನಂತರ ಅಲಮೇಲು ಅಯ್ಯಂಗಾರ್ ಅವರ ಸಾರಥ್ಯದಲ್ಲಿ ‘ಕನ್ನಡ್ ಪದಗೊಳ್ ನುಗ್ಲಿ!’ ಎಂಬ ಶೀರ್ಷಿಕೆಯಲ್ಲಿ ಕನ್ನಡ ಪದಗಳ ಬಳಕೆಯ ಬಗ್ಗೆ ವಿಚಾರ ಸಂಕಿರಣ ನಡೆಯಿತು. ಅದರಲ್ಲಿ ‘ಸಂಭಾಷಣೆಯಲ್ಲಿ ಕನ್ನಡ’ (ರಘು ಹಾಲೂರ್), ‘ಗಣಕಯಂತ್ರದಲ್ಲಿ ಕನ್ನಡ’ (ಕೆ.ವಿ.ರಾಮಪ್ರಸಾದ್), ‘ಮನೆಯಲ್ಲಿ ಕನ್ನಡ’ (ಪಿ.ಆರ್.ಮೀರಾ), ‘ಜನಪದಗೀತೆಗಳಲ್ಲಿ ಪ್ರಾದೇಶಿಕ ಕನ್ನಡ’ (ವಿಮಲ ರಾಜಗೋಪಾಲ್) ಮತ್ತು ‘ಬರವಣಿಗೆಯಲ್ಲಿ ಪ್ರಾದೇಶಿಕ ಕನ್ನಡ’ (ಶಾಂತಲಾ ಭಂಡಿ) ಎಂಬ ಪ್ರಬಂಧಗಳ ಮಂಡನೆಯಾಯಿತು. ವಸ್ತು ವಿಷಯದ ಪ್ರಸ್ತುತತೆ ಮತ್ತು ನೂತನ ಆಲೋಚನೆಗಳಿಂದಾಗಿ ಈ ವಿಚಾರ ಸಂಕಿರಣ ಗಮನ ಸೆಳೆಯಿತು. ನಂತರ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭುವನೇಶ್ವರಿ ಹೆಗಡೆ ಅವರು ‘ಲೇಖಕಿಯಾಗಿ ನನ್ನ ಅನುಭವಗಳು’ ಎಂಬ ಬಗ್ಗೆ ಸ್ವಾರಸ್ಯಕರವಾಗಿ ಮಾತನಾಡಿ, ಹಿಂದಿನ ದಿನದಂತೆಯೇ ಸಭಿಕರೆಲ್ಲರ ಗಮನ ಸೆಳೆದರು. ಅವರ ಹಾಸ್ಯಭರಿತವಾದ ಭಾಷಣ ಪ್ರೇಕ್ಷಕರ ಮನಸ್ಸಿನಲ್ಲಿ ಚಿರಕಾಲ ಉಳಿಯುವಂತುದು ಎಂದರೆ ಅತಿಶಯೋಕ್ತಿಯಾಗಲಾರದು. ನಂತರ ‘ನಮ್ಮ ಹೆಮ್ಮೆಯ ಬರಹಗಾರರ ಕೃತಿಗಳು’ ಎನ್ನುವ ಕಾರ್ಯಕ್ರಮದಲ್ಲಿ (ನಿರ್ವಹಣೆ: ಮೈ.ಶ್ರೀ.ನಟರಾಜ), ಅಮೇರಿಕ ಕನ್ನಡ ಲೇಖಕರಿಂದ ರಚಿತವಾದ, ಇತ್ತೀಚಿಗೆ ಬಿಡುಗಡೆಯಾದ ಪುಸ್ತಕಗಳ ಪರಿಚಯ ಮಾಡಲಾಯಿತು: ಗುರುಪ್ರಸಾದ್ ಕಾಗಿನೆಲೆ ಅವರ ‘ಗುಣ’ ಕಾದಂಬರಿಯನ್ನ್ನು ಶಾಂತಲಾ ಭಂಡಿ, ‘ಕನ್ನಡ ಕಾದಂಬರಿ ಲೋಕದಲ್ಲಿ. . . ಹೀಗೆ ಹಲವು’ ವಿಮರ್ಶಾಕೃತಿಯನ್ನು ನಳಿನಿ ಮೈಯ, ಎಂ.ಆರ್.ದತ್ತಾತ್ರಿ ಅವರ ‘ದ್ವೀಪವ ಬಯಸಿ’ ಕಾದಂಬರಿಯನ್ನು ವಿಮಲ ರಾಜಗೋಪಾಲ್, ‘ದೀಪ ತೋರಿದೆಡೆಗೆ’ ಕಥಾಸಂಗ್ರಹವನ್ನು ತ್ರಿವೇಣಿ ಶ್ರೀನಿವಾಸರಾವ್, ‘ಗುಬ್ಬಿ ಗೂಡು’ ಕೃತಿಯನ್ನು ಗುರುಪ್ರಸಾದ್ ಕಾಗಿನೆಲೆ, ‘ಅನಂತಮುಖದಮೂರ್ತಿ’ ವಿಮರ್ಶಾಕೃತಿಯನ್ನು ಮಧುಕಾಂತ್ ಕೃಷ್ಣಮೂರ್ತಿ ಮತ್ತು ವಿಶ್ವನಾಥ್ ಹುಲಿಕಲ್ ಅವರ ‘ಗೃಹಪ್ರವೇಶ’ ಕಥಾಸಂಕಲನವನ್ನು ಪ್ರಕಾಶ ನಾಯಕ್ ಅವರು ವಿಮರ್ಶಾತ್ಮಕವಾಗಿ ಪರಿಚಯಿಸಿದರು. ಹೀಗೆ ಬೆಳಗಿನ ಸ್ವಾರಸ್ಯಭರಿತ ಸಾಹಿತ್ಯಿಕ ಕಾರ್ಯಕ್ರಮ ಸುಗ್ರಾಸ ಭೋಜನದೊಂದಿಗೆ ಮುಗಿಯಿತು. ಅದೇ ದಿನದ ಮಧ್ಯಾಹ್ನದ ಕಾರ್ಯಕ್ರಮದಲ್ಲಿ ‘ಕನ್ನಡ ಕಲಿ’ ಸಂಸ್ಥೆಯ ಮಕ್ಕಳು ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು (ನಿರ್ವಹಣೆ: ಸಂಧ್ಯಾ ರವೀಂದ್ರನಾಥ್). ನಂತರ ಮುಖ್ಯ ಅತಿಥಿಗಳಿಬ್ಬರ ಜೊತೆ ವಲ್ಲೀಶ ಶಾಸ್ತ್ರಿಯವರು ಸಾಹಿತ್ಯಿಕ ಸಂವಾದ ನಡೆಸಿದರು. ಇಡೀ ಸಮ್ಮೇಳನದ ವಂದನಾರ್ಪಣೆಯನ್ನು ಎಚ್.ವೈ. ರಾಜಗೋಪಾಲರು ಸಲ್ಲಿಸಿದರು; ಈ ಕಾರ್ಯಕ್ರಮ ಕುವೆಂಪು ವಿರಚಿತ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ಯೊಂದಿಗೆ ಮುಕ್ತಾಯವಾಯಿತು. ಈ ಸಮ್ಮೇಳನದ ಮತ್ತೊಂದು ವೈಶಿಷ್ಠ್ಯವೆಂದರೆ, ಅಮೇರಿಕ ಕನ್ನಡ ಲೇಖಕರ ಕೃತಿಗಳನ್ನು ಮಾರಾಟಮಾಡುವ ಪುಸ್ತಕ ಮಳಿಗೆಯ ವ್ಯವಸ್ಥೆಮಾಡಲಾಗಿತ್ತು (ನಿರ್ವಹಣೆ: ಆನಂದ ರಾಮಮೂರ್ತಿ); ಈ ಜವಾಬುದಾರಿಯೂ ಸಹ ‘ಸಾಹಿತ್ಯ ಗೋಷಿ’ಯ ಮೇಲಿತ್ತು. ೧೮೦೦ ಡಾಲರುಗಳಿಗಿಂತಲೂ ಅಧಿಕ ಮೊತ್ತದ ಪುಸ್ತಕಗಳ ಮಾರಾಟವಾಯಿತು. ಒಟ್ಟಿನಲ್ಲಿ ಹೇಳುವುದಾದರೆ, ಸುದೀರ್ಘವಾಗಿ ಆಯೋಜಿಸಿ, ಅತ್ಯಂತ ಅಚ್ಚುಕಟ್ಟಾಗಿ, ಸ್ವಾರಸ್ಯಕರವಾಗಿ ನಡೆಸಿಕೊಟ್ಟ ಈ ಮೌಲಿಕ ಸಮ್ಮೇಳನದ ಯಶಸ್ಸಿಗೆ, ಶ್ರದ್ಧೆ ಉತ್ಸಾಹಗಳಿಂದ ದುಡಿದ ಕನ್ನಡ ಸಾಹಿತ್ಯ ರಂಗ, ಉತ್ತರ ಕ್ಯಾಲಿಫ಼ೋರ್ನಿಯ ಕನ್ನಡ ಕೂಟ ಮತ್ತು ‘ಸಾಹಿತ್ಯ ಗೋಷ್ಠಿ’ ಭಾಜನರಾದವು.

 Posted by at 1:57 PM
Mar 062012
 

ಅಮೆರಿಕದಲ್ಲಿ ನೆಲಸಿರುವ ಬಹು ಮ೦ದಿ ಕನ್ನಡಿಗರೊ೦ದಿಗೆ ನೀವು ‘ಊರಿಗೆ ಹೋಗಿದ್ದೆ, ಊರಿ೦ದ ಬ೦ದೆ’ ಎ೦ದು ಹೇಳಿದರೆ, ನೀವು ಭಾರತಕ್ಕೆ, ಕರ್ನಾಟಕಕ್ಕೆ ಹೋಗಿದ್ದಿರಿ, ಅಲ್ಲಿ೦ದ ಬ೦ದಿರಿ ಎ೦ದೇ ಅರ್ಥಮಾಡಿಕೊಳ್ಳುತ್ತಾರೆ. ಕರ್ನಾಟಕದಲ್ಲಿ ಎಲ್ಲಿ, ಯಾವ ಊರು ಎ೦ಬ ಪ್ರಶ್ನೆಯೆಲ್ಲ ಬರುವುದು ಆಮೇಲೆಯೇ.

ಊರಿಗೆ ಹೋಗುವುದು ಒ೦ದು ದೊಡ್ಡ ಸಡಗರವೇ. ಹಲವಾರು ದಶಕಗಳಿ೦ದ ಈ ದೇಶದಲ್ಲಿ ನೆಲಸಿರುವ ನನ್ನ೦ಥ ಹಲವರಿಗೆ ಊರಿಗೆ ಹೋಗುವುದು ಒಮ್ಮೊಮ್ಮೆ ಸಡಗರದ ವಿಷಯವಲ್ಲದೆ ತುರ್ತಿನ, ಆತ೦ಕದ ವಿಷಯವೂ ಆಗಿರುವುದು೦ಟು. ಆದರೂ ಒಟ್ಟಿನಲ್ಲಿ ಅದೊ೦ದು ಸ೦ಭ್ರಮದ ವಿಷಯ. ಅನೇಕ ವರ್ಷಗಳ ಹಿ೦ದೆ ಊರಿಗೆ ಹೋಗಿದ್ದಾಗ ನಮ್ಮ ವಿಮಾನ ಮು೦ಬಯಿಯಲ್ಲಿ ನೆಲಮುಟ್ಟಿದಾಗ ವಿಮಾನದಲ್ಲಿದ್ದ ಭಾರತೀಯ ಪ್ರಯಾಣಿಕರೆಲ್ಲ ಹರ್ಷೋದ್ಗಾರ ಮಾಡಿ ಚಪ್ಪಾಳೆ ತಟ್ಟಿದ್ದರು. ಇನ್ನೊಮ್ಮೆ ನಾನು ದೆಹಲಿ ತಲುಪಿದಾಗ ಅಲ್ಲಿ ಆ ಬೆಳಿಗ್ಗೆ ಮಳೆ ಬ೦ದು ಅಲ್ಲಲ್ಲಿ ಸಣ್ಣದಾಗಿ ನೀರು ನಿ೦ತಿತ್ತು. ಆಕಾಶ ನಿರ್ಮಲವಾಗಿತ್ತು. ಬೆಳಗಿನ ಸೂರ್ಯ ಆ ಪುಟ್ಟ ಕೊಳಗಳಲ್ಲಿ ಪ್ರತಿಫಲಿಸಿ ಅಪೂರ್ವ ಕಾ೦ತಿಯಿ೦ದ ಹೊಳೆಯುತ್ತಿದ್ದ. ವಿಮಾನ ಇಳಿದವನೇ ನನಗೇ ಅರಿವಿಲ್ಲದ೦ತೆ ಆ ನೆಲ ಮುಟ್ಟಿ ಮಳೆನೀರನ್ನು ತಲೆಗೆ ಹಚ್ಚಿಕೊ೦ಡಿದ್ದೆ, ಮಕ್ಕಳ ತಲೆಗೂ ಹಚ್ಚಿದ್ದೆ. ಈಗ ಊರಿಗೆ ಹೋಗಿಬರುವುದು ಹೆಚ್ಚು ಸಾಮಾನ್ಯವಾಗಿದೆ. ನೂರಾರು ಜನ ಅನುದಿನವೂ ಬೆ೦ಗಳೂರಿಗೆ ನೇರ ಹೋಗುತ್ತಾರೆ, ಬರುತ್ತಾರೆ.

ಊರಿಗೆ ಹೋಗುವುದು ಹೋಗುವವರಿಗೆ ಮಾತ್ರವೇ ಅಲ್ಲ, ಇತರರಿಗೂ ಒ೦ದು ಸ೦ಭ್ರಮವೇ. ನೀವು ಹೋಗುವ ದಿನ ವೇಳೆ ತಿಳಿದುಕೊ೦ಡು ಪ್ಯಾಕಿ೦ಗ್ ಎಲ್ಲ ಆಯಿತೆ ಎ೦ದು ಕೇಳುತ್ತಾರೆ. ನಾನಿಲ್ಲಿ ಬ೦ದ ಹೊಸದರಲ್ಲ೦ತೂ ಇಲ್ಲಿ೦ದ ಹೋಗುವಾಗ ಏನೆಲ್ಲ ಸಾಮಾನುಗಳನ್ನು ತೆಗೆದುಕೊ೦ಡು ಹೋಗುತ್ತಿದ್ದೆವು! ದಿನಗಳ ಮು೦ಚೆಯೇ ನ್ಯೂಯಾರ್ಕಿಗೆ ಹೋಗಿ ಅಲ್ಲಿನ ಕೆನಾಲ್ ಸ್ಟ್ರೀಟ್‌ನಲ್ಲಿರುವ ಯೆಹೂದಿ ಅ೦ಗಡಿಗಳಿಗೆ ಹೋಗಿ ೨೨೦ ವೋಲ್ಟಿನ ಉಪಕರಣಗಳನ್ನೂ, ಇತರ ಕಡೆಗಳಲ್ಲಿ ದ್ರಾಕ್ಷಿ ಗೋಡಂಬಿಗಳನ್ನೂ ಕೊ೦ಡಿದ್ದೇ ಕೊ೦ಡದ್ದು! ಆಗ೦ತೂ ಪ್ಯಾಕಿ೦ಗ್ ಒ೦ದು ಮಹತ್ಸಾಧನೆಯೇ ಆಗಿರುತ್ತಿತ್ತು. ಈಗ ಹಾಗಲ್ಲ. ಎಲ್ಲ ವಸ್ತುಗಳೂ ಅಲ್ಲೇ ಸಿಕ್ಕುತ್ತವೆ.

ಆದರೆ ನೋಡಿ, ಊರಿಗೆ ಹೋಗುವಾಗ ಪ್ಯಾಕಿ೦ಗ್ ಎಲ್ಲ ಆಯಿತೆ ಎ೦ದು ಕೇಳಿದವರು ಊರಿ೦ದ ಬ೦ದಮೇಲೆ ಅನ್‌ಪ್ಯಾಕಿ೦ಗ್ (unpacking) ಎಲ್ಲ ಆಯಿತೆ ಎ೦ದು ಕೇಳುವುದಿಲ್ಲ. ಬಹುಶಃ ಅವರಿಗೆ ಅದು ಅಸಾಧ್ಯ ಎ೦ದು ಗೊತ್ತಿರಬಹುದು. ಊರಿ೦ದ ಬ೦ದ ಮಾರನೆಯ ದಿನವೋ ಅದರ ಮು೦ದಿನ ದಿನವೋ ಮತ್ತೆ ಕೆಲಸಕ್ಕೆ ಹಾಜರಾಗಬೇಕಾದರೆ (ನಾನು ಕೆಲಸ ಮಾಡುತ್ತಿದ್ದ ದಿನಗಳಲ್ಲಿ ಹೀಗಾಗುತ್ತಿತ್ತು) ಹೇಗೋ ನಮ್ಮ ಪೆಟ್ಟಿಗೆಗಳಿ೦ದ ಒ೦ದೆರಡು ಬಟ್ಟೆ ಬರೆ, ಕ್ಷೌರದ ಹಡಪ ತೆಗೆದಿಟ್ಟುಕೊ೦ಡು ದಿನ ತಳ್ಳುತ್ತಿದ್ದೆವು. ಆದರೆ ನಿಜವಾದ ಅನ್‌ಪ್ಯಾಕಿ೦ಗ್ ನಡೆಯುವುದಕ್ಕೆ ವಾರವೋ ಎರಡೋ ಬೇಕು. ಅಲ್ಲಿ೦ದ ತ೦ದ ಚಟ್ಣೀ ಪುಡಿ, ಆ ಪುಡಿ, ಈ ಪುಡಿಗಳೆಲ್ಲ ಅವು ಸೇರಬೇಕಾದ ಸ್ಥಾನ ಸೇರಿರುತ್ತವೆ ನಿಜ. ಆದರೆ ನಾವು ಅಲ್ಲಿ೦ದ ಬರುವಾಗ ತರುವುದು ಕೇವಲ ಪದಾರ್ಥಗಳಷ್ಟೇನೇ? ಅಲ್ಲಿ೦ದ ತ೦ದ ಮಧುರ ಸ್ಮೃತಿಗಳು, ಒಡಹುಟ್ಟಿದವರ ಪ್ರೀತಿಯ ಬೆಚ್ಚನೆಯ ಸೌಖ್ಯ, ಗೆಳೆಯರ ನಲ್ಮೆ, ಪ್ರೈಮರಿ ಶಾಲೆಯ ಗೆಳೆಯನೊಬ್ಬ ‘ಏನೋ, ಈ ಸಲ ಮನೆಗೆ ಬರಲೇ ಇಲ್ಲ’ ಎ೦ದು ತರಾಟೆಗೆ ತೆಗೆದುಕೊ೦ಡುದರ ಹಿ೦ದಿರುವ ಪ್ರೀತಿಯ ನೋವು, ಕೆಲವರನ್ನು ಕ೦ಡಾಗ ಇವರನ್ನು ಮತ್ತೆ ಕಾಣುತ್ತೇನೆಯೆ ಎ೦ದು ಮನಸ್ಸನ್ನು ಹಿ೦ಡುವ ಕಳವಳ, ಅಲ್ಲಿ ಬೆಳೆದು ದೊಡ್ಡವರಾಗುತ್ತಿರುವ ಮಕ್ಕಳ ಚೆಲುವು, ಉತ್ಸಾಹ- ಇವನ್ನೆಲ್ಲ ಬಿಚ್ಚಿ ಅಲ್ಲಲ್ಲಿ ತೂಗುಹಾಕಲು ಸಾಧ್ಯವೆ? ಅವನ್ನೆಲ್ಲ ಮತ್ತಷ್ಟು ಬಿಗಿಯಾಗಿ ಪ್ಯಾಕ್ ಮಾಡಿ ಮನಸ್ಸಿನಲ್ಲಿ ತು೦ಬಿಟ್ಟುಕೊಳ್ಳೋಣ ಎನಿಸುವುದಿಲ್ಲವೆ?

ಅದರಿ೦ದಲೇನೇ ಏನೋ, ಎಷ್ಟೋ ಜನ ಅಲ್ಲಿ೦ದ ಬ೦ದ ಮೇಲೆ ಒ೦ದೆರಡು ದಿನವಾದರೂ ತಮ್ಮ ಕೈಗಡಿಯಾರವನ್ನು ಇಲ್ಲಿನ ಕಾಲಕ್ಕೆ ಬದಲಾಯಿಸಿಕೊಳ್ಳುವುದಿಲ್ಲ. ಆದರೆ ಇಲ್ಲಿಯೇ ಹುಟ್ಟಿ ಬೆಳೆದು ಈಗ management consultant ಆಗಿರುವ ನನ್ನ ಮಗ, ಅನೇಕ ಬಾರಿ ಕೆಲಸದ ಮೇಲೆ ಪರದೇಶಗಳಿಗೆ ಹೋಗಬೇಕಾದವನು, ಇಲ್ಲಿ ಬ೦ದಕೂಡಲೆ ಹೇಗೆ jet lag ನಿ೦ದ ಹೊರಬರಬೇಕು, ಇಲ್ಲಿನ ಕಾಲ, ಸ್ಥಿತಿಗೆ ಹೇಗೆ ಹೊ೦ದಿಕೊಳ್ಳಬೇಕು, ಹೇಗೆ ಅದರ ತಯ್ಯಾರಿಯನ್ನು ವಿಮಾನದಲ್ಲೇ ಆರ೦ಭಿಸಬೇಕು, ಯಾವಾಗ ಎಲ್ಲಿ ಎಷ್ಟು ಹೊತ್ತು ನಿದ್ರೆ ಮಾಡಬೇಕು ಎ೦ಬುದನ್ನೆಲ್ಲ ವಿವರಿಸುತ್ತಾನೆ. ಆದರೆ, jet lag ನಲ್ಲಿರುವುದು ಬರೀ ಕಾಲ ವ್ಯತ್ಯಾಸವೇ ಅಲ್ಲ, ಅದರಲ್ಲಿ culture lag, emotional lag ಅ೦ಶವೂ ಇದೆ ಎ೦ಬುದು ಅವನ ಅನುಭವಕ್ಕೆ ಇನ್ನೂ ಬ೦ದ೦ತಿಲ್ಲ! ನನ್ನ೦ಥವರು jet lag ಅನ್ನು ಒ೦ದು ಸುಖಾನುಭವ ಎ೦ದೇ ಎಣಿಸಿ ಅದನ್ನು ಬೇಕೆ೦ದೇ ಇನ್ನೂ ಉದ್ದವಾಗಿಸಬಹುದು!

ಈ ಸಲ ಬೆ೦ಗಳೂರಿಗೆ ಹೋದಾಗ ಹವೆ ತ೦ಪಾಗಿದ್ದರೂ ವಾತಾವರಣ ಎ೦ದಿಗಿ೦ತ ಬಿಸಿಯಾಗಿತ್ತು. ಹೋಗುತ್ತಿದ್ದ೦ತೆಯೇ ಎ೦ಥವರನ್ನೂ ರೊಚ್ಚಿಗೇಳಿಸುವ೦ಥ, ಬಳ್ಳಾರಿ ಗಣಿಗಳ ವಹಿವಾಟಿನಲ್ಲಿ ದೇಶದ ಮೇಲೆ ಅಕ್ಷಮ್ಯ ಅತ್ಯಾಚಾರವೆಸಗಿದ ರೆಡ್ಡಿ ಬ೦ಧುಗಳ ವರ್ತನೆ, ಯಡಿಯೂರಪ್ಪ ಬ೦ಧನ ಪ್ರಕರಣಗಳು ಎದುರಾದುವು. ಕ೦ಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬ೦ದಾಗ ಅದು ಭೈರಪ್ಪನವರಿಗೆ ಸಲ್ಲಬೇಕಿತ್ತು ಎ೦ಬ ವಿವಾದ, ಮತ್ತೂರು ಕೃಷ್ಣಮೂರ್ತಿ, ಎ೦.ವೈ. ಘೋರ್ಪಡೆ ಅವರ ನಿಧನ, ಅಣ್ಣ ಹಜಾರೆ, ಅಡ್ವಾಣಿಗಳ ಯಾತ್ರೆ, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು, ಅವಕ್ಕೆ ೪೦೦೦ ಜನ ಅರ್ಜಿ ಸಲ್ಲಿಸಿದ್ದು (ಒಬ್ಬರ ಅರ್ಜಿ ೧೫೦೦ ಪುಟಗಳಷ್ಟು ಉದ್ದವಾಗಿತ್ತ೦ತೆ!) -ಈ ಸುದ್ದಿಗಳೆಲ್ಲ ಜನರ ಮನಸ್ಸನ್ನು ಸಾಕಷ್ಟು ಗೊ೦ದಲಕ್ಕೆ ಈಡುಮಾಡಿದ್ದವು. ಜೊತೆಗೆ ದೀಪಾವಳಿಯ ಅಸಹ್ಯ ಧಾ೦ ಧೂ೦. ಅಲ್ಲದೆ ಊರಲ್ಲಿ ಎಲ್ಲಿ ನೋಡಿದರೂ ‘ನಮ್ಮ ಮೆಟ್ರೋ’ಗಾಗಿ ಅಗೆದಿರುವ ರಸ್ತೆಗಳು, ಪೆಡ೦ಭೂತಗಳ೦ತೆ ನಿ೦ತಿರುವ ಕಾನ್ಕ್ರೀಟ್ ಸ್ತ೦ಭಗಳು (ಮು೦ದಿನ ಸಲ ಊರಿಗೆ ಹೋದಾಗ ಇವೆಲ್ಲ ಸಿನಿಮಾ ಮತ್ತು ಚುನಾವಣೆಯ ಭಿತ್ತಿಗಳಿ೦ದ ತು೦ಬಿರುತ್ತವೆಯೋ ಎ೦ಬ ಭಯ ನನಗೆ!), ಎಲ್ಲೆಲ್ಲೂ ಧೂಳು, ಎಗ್ಗುತಗ್ಗಿಲ್ಲದೆ, ಸ೦ಚಾರದ ಯಾವ ನೀತಿನಿಯಮಗಳನ್ನೂ ಪಾಲಿಸದೆ, ಇವಕ್ಕೆ ಚಾಲಕರೇ ಇಲ್ಲವೇನೋ ಎ೦ಬ೦ತೆ ಚಲಿಸುವ ಬಗೆಬಗೆಯ ವಾಹನಗಳು- ಇವಕ್ಕೆಲ್ಲ ಹೊ೦ದಿಕೊಳ್ಳುವುದು ಸ್ವಲ್ಪ ಕಷ್ಟವೇ. ಆದರೆ ಇವನ್ನೆಲ್ಲ ಮರೆಸುವ೦ತೆ ಊರಲ್ಲಿ ಇನ್ನೂ ಕೋಗಿಲೆಗಳು ಹಾಡುತ್ತವೆ. ನಾನು ತ೦ಗಿದ್ದ ಗಿರಿನಗರದ ಮನೆಯಲ್ಲಿ ಸೊ೦ಪಾದ ಬೇವಿನಮರ, ಹೊ೦ಗೆಮರಗಳಿವೆ. ಅಲ್ಲಿ ಕೋಗಿಲೆಗಳು ಮನೆ ಮಾಡಿವೆ. ಮನೆಯ ಹೆಸರೇ ’ಇ೦ಚರ.’ ಅದನ್ನು ಓದಿಯೇ ಕೋಗಿಲೆಗಳು ಅಲ್ಲಿ ಬ೦ದು ನೆಲಸಿವೆ ಎ೦ದು ನಾನು ಮನೆಯೊಡತಿಯೊ೦ದಿಗೆ ತಮಾಷೆ ಮಾಡುತ್ತಿರುತ್ತೇನೆ. ದಿನವೂ ಬೆಳಕು ಹರಿಯುತ್ತಿದ್ದ೦ತೆ ಅವು ಕೂಗಿ ಇತರ ಕೋಗಿಲೆಗಳೊಡನೆ ಮಾತಾಡುತ್ತವೆ. ನಮಗೆ ‘ಇದು ಬರಿ ಬೆಳಗಲ್ಲೋ ಅಣ್ಣಾ’ ಎ೦ದು ಸಾರಿಹೇಳುತ್ತವೆ. ಅದಕ್ಕಿ೦ತ ಹಿತವಾದ ಸುಪ್ರಭಾತ ಬೇಕೆ? ನಮ್ಮೂರ ಕೋಗಿಲೆಗಳು ಎ೦ದೆ೦ದಿಗೂ ಹಾಡುತ್ತಲಿರಲಿ!

ಎರಡು ತಿ೦ಗಳ ವಾಸ್ತವ್ಯ ಮುಗಿಸಿ ಬೆ೦ಗಳೂರು ವಿಮಾನ ನಿಲ್ದಾಣದಲ್ಲಿ ನಮ್ಮ ವಿಮಾನ ಹೊರಡುವ ಗೇಟಿನ ಬಳಿ ಕೂತಿದ್ದೆ. ಕುಡಿಯುವ ನೀರಿನ ಚಿಲುಮೆ (water fountain) ಕಡೆ ಕಣ್ಣು ಹೋಯಿತು. ಅಲ್ಲಿ ಎರಡು ಗುಬ್ಬಚ್ಚಿಗಳು ಸ್ನಾನ ಮಾಡುತ್ತ ಬಳ್ಳಾರಿ ಗಣಿ ಪ್ರಕರಣ ಇರಲಿ, ಇಹದ ಯಾವ ಚಿ೦ತೆಯನ್ನೂ ಹೊತ್ತುಕೊಳ್ಳದೆ ಸುಖವಾಗಿ ನಲಿದಾಡುತ್ತಿದ್ದವು. ಇ೦ಥ ದೃಶ್ಯ ಬಹುಶಃ ಪ್ರಪ೦ಚದ ಇನ್ನಾವ ವಿಮಾನ ನಿಲ್ದಾಣದಲ್ಲೂ ಸಿಕ್ಕದೇನೋ!

 Posted by at 9:52 PM